ಕಣಿಪುರ ಸುದ್ದಿಜಾಲ(ಸೆ.22)
ಕಾಸರಗೋಡಿನ ಉಪ್ಪಳ ಕೇಂದ್ರೀಕರಿಸಿ ನಡೆಯುತ್ತಿದ್ದ ಮಾದಕ ವಸ್ತು ದಂಧೆಗೆ ಬೆಂಗಳೂರಿನ ನಂಟಿದ್ದು, ಈ ವಹಿವಾಟಿಗೆ ಕೋಟ್ಯಾಂತರ ರೂ ಹೂಡಿದ್ದ ವ್ಯಕ್ತಿಗಳ ಕುರಿತು ತನಿಖಾಧಿಕಾರಿಗಳಿಗೆ ಸುಳಿವು ದೊರೆತಿದೆ.
ಉಪ್ಪಳ ಕೊಂಡೆವೂರಿನ ಪತ್ವಾಡಿ ನಿವಾಸಿ ಅಮೀರ್ ಎಂಬವರ ಪುತ್ರ ಆಸ್ಕರ್ ಆಲಿ(26)ಎಂಬಾತನ ಮನೆಗೆ ಶುಕ್ರವಾರ ಸುಸಜ್ಜಿತರಾಗಿ ಧಾಳಿ ನಡೆಸಿದ ಪೋಲೀಸರು, ಮನೆಯಲ್ಲಿ ಬಚ್ಚಿಟ್ಟಿದ್ದ 3ಕೋಟಿರೂ ಮೌಲ್ಯ ಮೀರಿದ 3ಕೆಜಿ ಎಂ.ಡಿ.ಎಂ.ಎ ಸಹಿತ ಕೊಕೇನ್ ಒಳಗೊಂಡ ಮಾದಕ ವಸ್ತುಗಳನ್ನು ವಶಪಡಿಸಿ ಆರೋಪಿಯನ್ನು ಬಂಧಿಸಿದ್ದರು. ಈತ ಈದಂಧೆಯ ಏಜೆಂಟನಾಗಿದ್ದು, ಕೋಟ್ಯಾಂತರ ರೂ ಹೂಡಿಕೆ ಮಾಡಿ ದಂಧೆ ನಡೆಸುವವರು ಬೇರೆಯೇ ಇದ್ದು, ಅವರ ಕುರಿತು ಸುಳಿವು ದೊರೆತಿದೆಯೆಂದು ತನಿಖಾದಳದಿಂದ ಮಾಹಿತಿ ಸಿಕ್ಕಿದೆ.
ಬೆಂಗಳೂರು ಕೇಂದ್ರೀಕರಿಸಿರುವ ಬೃಹತ್ ಜಾಲದೊಂದಿಗೆ ಇದಕ್ಕೆ ನಂಟಿದೆ. ಕೋಟ್ಯಾಂತರ ರೂ ವಹಿವಾಟಿನಿಂದ ಬೆಂಗಳೂರಿನಿಂದ ಉಪ್ಪಳಕ್ಕೆ ಸಾಗಿಸಿ ತಂದು ಆಸ್ಕರ್ ಆಲಿಯ ಮನೆಯಲ್ಲಿ ಮಾದಕ ವಸ್ತು ದಾಸ್ತಾನಿಟ್ಟು, ಮಾರಾಟ ದಂಧೆ ನಡೆಯುತ್ತಿತ್ತು. ಕಾಸರಗೋಡು ಜಿಲ್ಲೆಗೆ ಇಲ್ಲಿಂದಲೇ ಮಾದಕ ವಸ್ತು ಪೂರೈಕೆಯಾಗುತ್ತಿತ್ತು ಎಂದು ಪೋಲೀಸರು ತಿಳಿಸಿದ್ದಾರೆ.
ಆರೋಪಿಯ ಮನೆಯಿಂದ ಒಟ್ಟು 3.4 ಕೆಜಿ ಎಂಡಿಎಂಎ, 96.96 ಗ್ರಾಂ ಕೊಕೇನ್, 640ಗ್ರಾಂ ಗಾಂಜಾ ಮತ್ತು 30. ಮಾದಕ ಮಾತ್ರೆಗಳನ್ನು ವಶಪಡಿಸಲಾಗಿತ್ತು. ಇದರ ಮೌಲ್ಯ 3.5ಕೋಟಿಯಷ್ಟೆಂದು ಅಂದಾಜಿಸಲಾಗಿದೆ. ಇದು ಅತ್ಯುತ್ತರ ಕೇರಳದಲ್ಲಿ ನಡೆದ ಅತೀ ದೊಡ್ಡ ಮಾದಕ ವಸ್ತು ಭೇಟೆಯಾಗಿದೆ.
ಬಂಧಿತ ಆರೋಪಿ ಆಸ್ಕರ್ ಆಲಿ ಪದವೀಧರನಾಗಿ ನಿರುದ್ಯೋಗಿಯಾಗಿದ್ದನು. ಈತ ಮಾದಕ ವಸ್ತು ಸಾಗಾಟ,ಮಾರಾಟ ಮಾಡುವುದನ್ನೇ ಕಸುಬಾಗಿಸಿದ್ದನು. ದಿಢೀರ್ ಶ್ರೀಮಂತಿಕೆಯ ಬಯಕೆಯಿಂದ ಈದಂಧೆಯಲ್ಲಿ ನಿರತನಾದನೆಂದು ಪೋಲೀಸರು ತಿಳಿಸಿದ್ದಾರೆ. ಬೃಹತ್ ಪ್ರಮಾಣದ ಮಾದಕವಸ್ತು ಮನೆಯಲ್ಲಿ ಬಚ್ಚಿಟ್ಟು, ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಈತನ ಮನೆ, ಬೇಂಕ್ ಖಾತೆ, ವಾಹನವನ್ನು ಮುಟ್ಟುಗೋಲು ಹಾಕಲಾಗುವುದೆಂದು ತನಿಖಾದಳ ತಿಳಿಸಿದೆ.
ಸುಳಿವು ಸಿಕ್ಕಿದ್ದು ಹೀಗೆ
ಇತ್ತೀಚಿಗೆ ಬೇಕಲ ಪೋಲೀಸ್ ಠಾಣಾ ವ್ಯಾಪ್ತಿಯ ಮೇಲ್ಪರಂಬದಿಂದ 50 ಗ್ರಾಂ ಎಂಡಿಎಂಎ ಸಹಿತ ಮೂಲತಃ ಮೂಡಿಗೆರೆ ನಿವಾಸಿ ರವಿ ಯಾನೆ ಅಬ್ದುಲ್ ರಹ್ಮಾನ್ ಎಂಬಾತನನ್ನು ಬಂಧಿಸಲಾಗಿತ್ತು. ಈತನನ್ನು ವಿಚಾರಣೆಗೊಳಪಡಿಸಿದಾಗ ಉಪ್ಪಳದ ಎಂಡಿಎಂಎ ದಂಧೆಯ ಕುರಿತು ಸುಳಿವು ದೊರೆತಿತ್ತು. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಅವರ ಆದೇಶದಂತೆ ಈ ಕುರಿತು ತನಿಗೆಗೆಂದು ಪ್ರತ್ಯೇಕ ದಳ ರಚಿಸಿ ಉಪ್ಪಳದ ದಂಧೆಯ ಕುರಿತು ಖಚಿತ ಮಾಹಿತಿ ಪಡೆದು ಶುಕ್ರವಾರ ಮಧ್ಯಾಹ್ನ ಸುಸಜ್ಜಿತರಾಗಿ ಆರೋಪಿಯ ಮನೆಗೆ ಧಾಳಿ ನಡೆಸಲಾಯಿತು.
ಈ ಪ್ರಕರಣದಲ್ಲಿ ಇನ್ನಷ್ಟು ಮಂದಿಗಳು ಬಂಧಿತರಾಗುವ ಸಾಧ್ಯತೆಗಳಿವೆ.