ಕಣಿಪುರ ಸುದ್ದಿಜಾಲ (ಸೆ.18)
ಕೋಝಿಕ್ಕೋಡ್ :
ವಾಮಾಚಾರಗಳ ಅಂಗವಾಗಿ ಮಹಿಳೆಯೊಬ್ಬರನ್ನು ಬೆತ್ತಲೆ ಪೂಜೆಗೆ ಒತ್ತಾಯಿಸಿದ ಇಬ್ಬರು ನಕಲಿ ಮಂತ್ರವಾದಿಗಳನ್ನು ಮಹಿಳೆಯ ದೂರಿನಂತೆ ಬಂಧಿಸಲಾಗಿದೆ. ಕೇರಳದ ಕಲ್ಲಿಕೋಟೆ ಬಳಿಯ ತಾಮರಶ್ಶ್ರೇರಿಯಲ್ಲಿ ಇಂಥದ್ದೊಂದು ಘಟನೆ ಬೆಳಕಿಗೆ ಬಂದಿದೆ.
ಕೌಟುಂಬಿಕ ಸಮಸ್ಯೆ ಪರಿಹಾರ ಮತ್ತು ಆರ್ಥಿಕ ಪರಿಸ್ಥಿತಿಯ ಉನ್ನತಿಗಾಗಿ ಬೆತ್ತಲೆಪೂಜೆ ನಡೆಸಬೇಕೆಂದು ಮಹಿಳೆಗೆ ಉಪದೇಶಿಸಿದ ಇಬ್ಬರು ಬಳಿಕ ಮಹಿಳೆಗೆ ನಿರಂತರ ಒತ್ತಾಯದ ಕಿರುಕುಳ ನೀಡಲಾರಂಭಿಸಿದರು. ಈ ಬೇಡಿಕೆಗೆ ಮಹಿಳೆ ಒಪ್ಪದೇ ಈ ಕುರಿತು ಪೋಲೀಸರಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ತಾಮರಶ್ಶೇರಿ ನಿವಾಸಿ ಪಿ.ಕೆ. ಪ್ರಕಾಶನ್(46), ಸಹಾಯಕ ಷಮೀರ್ (40) ಎಂಬಿವರನ್ನು ತಾಮರಶ್ಶೇರಿ ಪೋಲೀಸ್ ಇನ್ಸ್ಪೆಕ್ಟರ್ ಸುಜಯ್ ಕುಮಾರ್ ನೇತೃತ್ವದಲ್ಲಿ ಬಂಧಿಸಲಾಗಿದೆ.
ವಾಮಾಚಾರದ ಮರೆಯಲ್ಲಿ ಬೆತ್ತಲೆಪೂಜೆ ನಡೆಸುವಂತೆ ಇವರಿಬ್ಬರು ಮಹಿಳೆಯನ್ನು ಬೆಂಬಿಡದೇ ಒತ್ತಾಯಿಸಿದ್ದರೆಂದು ಕೇಸು ದಾಖಲಿಸಲಾಗಿದೆ. ಬಂಧಿತರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಲ್ಲಿಕೋಟೆಯ ಪುದುಪ್ಪಾಡಿ ನಿವಾಸಿ ಮಹಿಳೆಯೊಬ್ಬರು ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಬಳಲಿದ್ದರು. ಅವರನ್ನು ಮಂತ್ರವಾದಿಗಳ ಸೋಗಿನಲ್ಲಿ ಸಂಪರ್ಕಿಸಿದ ಷಮೀರ್ ನೇತೃತ್ವದಲ್ಲಿ ಈ ಕೃತ್ಯ ನಡೆದಿದೆ.