ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಿಫಾ ಹರಡುವಿಕೆ ಆತಂಕದಿಂದ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಮಲಪ್ಪುರಂ ಜಿಲ್ಲೆಯ ತಿರುವಾಲಿ ಪಂಚಾಯತಿನ 5ವಾರ್ಡುಗಳನ್ನು ಕಂಟೋನ್ಮೆಂಟ್ ಝೋನ್ ಎಂದು ಪರಿಗಣಿಸಿ ಸಂಪೂರ್ಣ ಮುಚ್ಚುವಂತೆ ಆದೇಶಿಸಲಾಗಿದೆ. ಅಲ್ಲದೇ ಜಿಲ್ಲೆಯ ಚಿತ್ರಮಂದಿರ,ಶೈಕ್ಷಣಿಕ ಸಂಸ್ಥೆಗಳನ್ನೂ ತಾತ್ಕಾಲಿಕ ಮುಚ್ಚುವಂತೆ ಆರೋಗ್ಯ ಇಲಾಖೆ ಆದೇಶಿಸಿದೆ
ಬೆಂಗಳೂರಲ್ಲಿ ವಿದ್ಯಾರ್ಥಿಯಾಗಿದ್ದ ಮಲಪ್ಪುರದ 24ರ ಹರೆಯದ ವ್ಯಕ್ತಿಯ ಮರಣಕ್ಕೆ ನಿಫಾ ವೈರಸ್ ಕಾರಣವೆಂದು ದೃಢೀಕರಣ ಗೊಂಡ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ನಿಫಾ ಆತಂಕದಿಂದ ಆರೋಗ್ಯ ಸಚಿವೆ ವೀಣಾ ಜಾರ್ಜ್ ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳ ತುರ್ತು ಸಭೆ ಕರೆದು, ಕಟ್ಟೆಚ್ಚರದ ಮುನ್ನೆಚ್ಚರಿಕಾ ಕ್ರಮಗಳಿಗೆ ಆದೇಶಿಸಿದ್ದಾರೆ. ಪ್ರೋಟೋ ಕಾಲ್ ಪ್ರಕಾರ ಮೃತ ವಿದ್ಯಾರ್ಥಿಯೊಂದಿಗೆ ಸಂಪರ್ಕ ಹೊಂದಿದ 151ಮಂದಿಗಳ ಪ್ರಾಥಮಿಕ ಪಟ್ಟಿ ರೂಪಿಸಿ, ಅವರನ್ನು ಪ್ರತ್ಯೇಕ ನಿಗಾದಲ್ಲಿರಿಸಲಾಗಿದೆ.
ಮಲಪ್ಪುರದಲ್ಲಿ ನಿಫಾ ಆತಂಕ ಉಂಟಾದುದರಲ್ಲಿ ಇಡೀ ರಾಜ್ಯಕ್ಕೆ ಆತಂಕ ಬೇಡವೆಂದೂ, ಆರೋಗ್ಯ ಇಲಾಖೆ ಈ ಕುರಿತು ಮುನ್ನೆಚ್ಚರಿಕೆ ವಹಿಸಿದೆಯೆಂದೂ ಸಚಿವರು ತಿಳಿಸಿದ್ದಾರೆ. ಆದರೆ ಓಣಂ ಸಹಿತ ಹಬ್ಬಗಳ ಹಿನ್ನೆಲೆಯಲ್ಲಿ ವೈರಸ್ ಹರಡುವ ಸಾಧ್ಯತೆಗಳನ್ನು ನಿರ್ಲಕ್ಷಿಸುವಂತಿಲ್ಲ. ಈ ಕಾರಣದಿಂದ ಮಲಪ್ಪುರದಲ್ಲಿ ಮಾಸ್ಕ್ ಧಾರಣೆ ಕಡ್ಡಾಯ ಮಾಡಲಾಗಿದೆ.
ಬೆಂಗಳೂರಲ್ಲಿ ವಿದ್ಯಾರ್ಥಿಯಾಗಿದ್ದ ತಿರುವಳ್ಳಿ ಗ್ರಾಮದ ಯುವಕ ಕಳೆದ ಶುಕ್ರವಾರ ಮೃತಪಟ್ಟಿದ್ದನು. ಬಳಿಕ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಮತ್ತು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯಲ್ಲಿ ನಡೆಸಿದ ತಪಾಸಣೆಯಲ್ಲಿ ನಿಫಾ ಪಾಸಿಟಿವ್ ವರದಿ ಬಂದಿತ್ತು.