ಕಣಿಪುರ ಸುದ್ದಿಜಾಲ
ತೆಂಕುತಿಟ್ಟುಯಕ್ಷಗಾನದ ಹಾಸ್ಯ ಕಲಾವಿದರ ಪೈಕಿ ಪ್ರಮುಖ ಹಲವರು ಈ ಬಾರಿ ಮೇಳದಿಂದ ಮೇಳಕ್ಕೆ ವಲಸೆ ಹೊರಟಿದ್ದಾರೆ. ಹಿರಿಯ ಅನುಭವಿ ಹಾಸ್ಯಗಾರರಿಂದ ಮೊದಲ್ಗೊಂಡು ಕಿರಿಯ ಹಾಸ್ಯ ಕಲಾವಿದರ ತನಕ ಮೇಳದಿಂದ ಮೇಳಕ್ಕೆ ಹಾರುವ ಕುಣಿತ ಕಾಣಿಸಿದ್ದು, ಯಾರು..ಎಲ್ಲಿಗೆ? ಎಂಬುದು ಪ್ರೇಕ್ಷಕ, ಅಭಿಮಾನಿಗಳ ಕಲಾ ವಲಯದಲ್ಲಿ ಕುತೂಹಲ ಮೂಡಿಸಿದೆ.
ಹನುಮಗಿರಿ ಮೇಳದಲ್ಲಿ ಪ್ರಧಾನ ಹಾಸ್ಯಗಾರರಾಗಿದ್ದ ಹಿರಿಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯರು ಮುಂದಿನ ತಿರುಗಾಟಕ್ಕೆ ಹನುಮಗಿರಿಯಲ್ಲಿಲ್ಲ. ಅವರು ಹಿರಿಯಡ್ಕ ಮೇಳದ ಪ್ರಧಾನ ಹಾಸ್ಯಕ್ಕೆ ಸೇರ್ಪಡೆಯಾಗಿದ್ದಾರೆ.
ಹಿರಿಯಡ್ಕ ಮೇಳದಲ್ಲಿದ್ದ ಉಭಯ ತಿಟ್ಟುಗಳ ಕಲಾವಿದ ಅರುಣ್ ಜಾರ್ಕಳ ಅಲ್ಲಿಂದ ಬೆಂಕಿನಾಥೇಶ್ವರ ಮೇಳಕ್ಕೆ ಜಿಗಿದಿದ್ದಾರೆ. ಹನುಮಗಿರಿ ಮೇಳದಲ್ಲಿ ಸೀತಾರಾಂ ಕುಮಾರ್ ಕಟೀಲು ಪ್ರಧಾನ ಹಾಸ್ಯಕ್ಕೆ ಭಡ್ತಿಯಾಗಿದ್ದು, ಎರಡನೇ ಹಾಸ್ಯಕ್ಕೆ ಕಟೀಲು ಮೇಳದಲ್ಲಿದ್ದ ಮೋಹನ ಮುಚ್ಚೂರು ಜೋಡಣೆಯಾಗಿದ್ದಾರೆ.
ಗೆಜ್ಜೆಗಿರಿ, ಸುಂಕದಕಟ್ಟೆ ಮೊದಲಾದ ಮೇಳಗಳಲ್ಲಿದ್ದ ಹಿರಿಯ ಹಾಸ್ಯಗಾರ ಚಂದ್ರಹಾಸ ತುಂಬೆ ಅವರು ಮರಳಿ ಕಟೀಲು ಮೇಳ ಸೇರ್ಪಡೆಯಾಗಿದ್ದಾರೆ. ಕಟೀಲಿನಲ್ಲಿದ್ದ ಮಹಾಬಲೇಶ್ವರ ಭಟ್ ತಿರುಗಾಟಕ್ಕೆ ನಿವೃತ್ತಿಯಾದರೆ, ಬೆಂಕಿನಾಥೇಶ್ವರ ಮೇಳದಲ್ಲಿದ್ದ ಸಂದೇಶ್ ಬಡಗಬೆಳ್ಳೂರು ಕಟೀಲು ಮೇಳಕ್ಕೆ ಸೇರ್ಪಡೆಯಾಗಿದ್ದಾರೆ. ಇದೇ ಜಾಡಿನಲ್ಲಿ ಇನ್ನೂ ಕೆಲವರ ವಲಸೆಯ ಕುರಿತು ವದಂತಿ ಕೇಳಿಬರುತ್ತಿದೆ.
ಯಕ್ಷಗಾನದಲ್ಲಿ ಹಿಂದೆ ಬೇಡಿಕೆಯ ತಾರಾ ಕಲಾವಿದರನ್ನು ಪ್ರತಿ ವರ್ಷದ ತಿರುಗಾಟಕ್ಕೆ ಮೇಳಗಳು ಪರಸ್ಪರ ಸೆಳೆಯುವ ಪ್ರಕ್ರಿಯೆಯಿತ್ತು. ಇದು ಅನೇಕ ಬಾರಿ ವಿವಾದ, ಜಗಳಕ್ಕೆ ಕಾರಣವಾದದ್ದೂ ಇದೆ. ಆಗ ಯಾವ ಕಲಾವಿದರು ಈ ಬಾರಿ ಯಾವುದರಲ್ಲೆಂದು ಮೇಳ ಹೊರಡುವಾಗಲಷ್ಟೇ ಗೊತ್ತಾಗುತ್ತಿತ್ತು. ಮೇಳ ಹೊರಡಿಸುವ ಕರಪತ್ರಗಳಿಗೆ ಈ ಕಾರಣಗಳಿಂದಲೇ ಬೇಡಿಕೆ ಇತ್ತು. ಆಗ ಟೆಂಟ್ ಮೇಳಗಳು ವಿಜೃಂಭಿಸಬೇಕಿದ್ದರೆ ಜನಾಕರ್ಷಣೀಯ ತಾರಾ ವರ್ಚಸ್ಸಿನ ಕಲಾವಿದರು ಅಗತ್ಯವಾಗಿದ್ದರು. ಈಗ ಕಾಲವೇ ಬದಲಾಗಿದೆ. ಕಲಾವಿದರಿಗೆ ಅಂಥಾ ಬೇಡಿಕೆ ಈಗಿಲ್ಲ.
ಈಗ ಯಕ್ಷಗಾನದಲ್ಲಿ ಸಾಂಪ್ರದಾಯಿಕ ಹಾಸ್ಯಕ್ಕಿಂತ ಸಮಕಾಲೀನ ಹಾಸ್ಯ ವಿಚಾರಗಳಿಗೆ ಬೇಡಿಕೆ ಬಂದಿದೆ. ಬದಲಾದ ಕಾಲಘಟ್ಟ ಮತ್ತು ಈಗಿನ ಜಾಗತಿಕವೇಗ ಹಾಗೂ ದಿನೇ, ದಿನೇ ಬದಲಾಗುತ್ತಿರುವ ಮನುಷ್ಯರ ಮನೋರಂಜನಾ ಜಗಲಿಯಲ್ಲಿ ಕುಳಿತು ಯಕ್ಷಗಾನ ನೋಡುವ ಹೊಸ ಜನಾಂಗದ ಪ್ರೇಕ್ಷಕರು ಯಕ್ಷಗಾನದ ಹಾಸ್ಯರಸವನ್ನು ಹೊಸಗಣ್ಣಿಂದ ನೋಡುತ್ತಿರುವುದು ಕಲಾವಿದರಿಗೆ ಸವಾಲಾಗಿದೆ. ಆದ್ದರಿಂದ ಹಾಸ್ಯಗಾರರು ವಿನೂತನತೆ ಸೃಜಿಸಲೇಬೇಕಾಗಿದ್ದಾರೆ.
ಬದಲಾಗುತ್ತಿರುವ ಹಾಸ್ಯ ಕ್ರಮಗಳು ಯಕ್ಷಗಾನೀಯ ಚೌಕಟ್ಟು ಮೀರಿ ಅಸಭ್ಯವಾಗುತ್ತಿದೆ ಎಂದು ಸಾಂಪ್ರದಾಯಿಕ ಪ್ರೇಕ್ಷಕರು ವಿಷಾದಗಳಿಂದ ನಿಟ್ಟುಸಿರಿಟ್ಟರೆ, ಹೊಸ ತಲೆಮಾರಿನ ಯುವ ಪೀಳಿಗೆ ಇದನ್ನೇ ಬಯಸುತ್ತಿದೆ ಎಂದು ಕಲಾವಿದರು ಸಮರ್ಥಿಸಿ ಹೇಳುತ್ತಾರೆ. ಈ ಆರೋಪ, ಸಮರ್ಥನೆಗಳು ಕಳೆದ ಐದು ದಶಕಗಳಿಂದ ಯಕ್ಷಗಾನದಲ್ಲೇ ಕೇಳುತ್ತಲೇ ಬಂದಿದೆ. ಯಕ್ಷಗಾನ ವರ್ಷದಿಂದ ವರ್ಷಕ್ಕೆ ದಾಟುತ್ತಲೇ ಹೋಗಿದೆ. ಹಿಂದೆ ಟೆಂಟ್ ಮೇಳದ ಕಾಲಕ್ಕೆ ಕಲಾವಿದರು ತಮ್ಮ ಪ್ರತಿಭೆಯಿಂದಲೇ ಬೇಡಿಕೆ ಕುದುರಿಸಬೇಕಿತ್ತು. ಆದರೆ ಈಗ ಪ್ರೇಕ್ಷಕರನ್ನು ಗೆದ್ದು, ಜನಪ್ರಿಯತೆ ಗಳಿಸಿ ಬೇಡಿಕೆ ಕುದುರಿಸಬೇಕಾದ ಪರಿಸ್ಥಿತಿ ಇದೆ.
ಏನಿದ್ದರೂ ಹಾಸ್ಯ ಕಲಾವಿದರು ಮೇಳ ಪಲ್ಲಟ ಮಾಡಿದಾಗ ಒಂದೊಂದು ಮೇಳದ ಹಾಸ್ಯರಸವೇ ಬದಲಾಗುತ್ತದೆ. ಪ್ರೇಕ್ಷಕರು ಆ ನಿರೀಕ್ಷೆಯಲ್ಲಿದ್ದಾರೆ.
ಚಿತ್ರ : ಸಾಂದರ್ಭಿಕ